Business
ರಾಷ್ಟ್ರೀಯ ಸಮಸ್ಯೆಯಾಗಿರುವ ನಕ್ಸಲ್ ಪಿಡುಗನ್ನು ಕೇವಲ ರಾಜ್ಯಕ್ಕೆ ಸೀಮಿತಗೊಳಿಸಿ ಮಾತನಾಡುವ ಸುನೀಲ್ ಕುಮಾರರದ್ದು ಬೌಧಿಕ ದಿವಾಳಿತನವಾಗಿದೆ: ಯೋಗೀಶ್ ಇನ್ನಾ

ರಾಜ್ಯದಲ್ಲಿ ಬಿಜೆಪಿ ಆಡಳಿವಿರುವ ಸಂದರ್ಭದಲ್ಲಿ ನಕ್ಸಲರ ವಿರುದ್ದದ ಹೋರಾಟದಲ್ಲಿ ಪೊಲೀಸರು ಎನ್ಕೌಂಟರ್ ನಡೆಸದಂತೆ ಆದೇಶವನ್ನು ನೀಡಿ ನಕ್ಸಲರಿಗೆ ಪರೋಕ್ಷ ಬೆಂಬಲ ನೀಡಿದ ಬಿಜೆಪಿಗರು ಇಂದು ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಕ್ಸಲರ ವಿರುದ್ದ ಕಠಿಣ ಕ್ರಮ ಕೈಗೊಂಡ ಪರಿಣಾಮ ಇಂದು ಸಮಾಜಘಾತುಕ ಮೋಸ್ಟ್ ವಾಂಟೆಡ್ ನಕ್ಸಲರ ಎನ್ಕೌಂಟರ್ ನಡೆದಿರುವುದನ್ನು ಸಹಿಸಲಾಗದೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಇಲ್ಲಿಯೂ ಕಾಂಗ್ರೆಸ್ ವಿರುದ್ದ ಕೊಂಕು ನುಡಿದಿರುವುದು ಬಿಜೆಪಿಗರ ಅಸಲಿ ಮುಖವನ್ನು ತೋರಿಸುತ್ತಿದೆ. ನಕ್ಸಲರ ವಿರುದ್ದ ಪೋಲಿಸರನ್ನು ನಿಶಸ್ತ್ರರನ್ನಾಗಿಸಿ ದುರ್ಬಲಗೊಲಕಿಸಿದ ಬಿಜೆಪಿಗರಿಗೆ ಕಾಂಗ್ರೆಸ್ ವಿರುದ್ದ ಮಾತನಾಡುವ ಯಾವ ನೈತಿಕತೆಯೂ ಇಲ್ಲ.
ನಕ್ಸಲ್ ಸಮಸ್ಯೆಯು ಕೇವಲ ಕರ್ನಾಟಕದಲ್ಲಿ ಮಾತ್ರ ಇರುವುದಲ್ಲ, ನಕ್ಸಲ್ ಸಮಸ್ಯೆಯು ದೇಶದಾದ್ಯಂತ ಇರುವಂತಹ ರಾಷ್ಟ್ರೀಯ ಸಮಸ್ಯೆಯಾಗಿದೆ. ದೇಶದ ಭದ್ರತೆಗೂ ನಕ್ಸಲೀಯರು ತೊಡಕನ್ನುಂಟು ಮಾಡುತ್ತಿದ್ದಾರೆ. ನಕ್ಸಲ್ ದಾಳಿಗಳಿಂದಾಗಿ ಹಲವಾರು ರಾಜ್ಯಗಳಲ್ಲಿ ನಮ್ಮ ಭದ್ರತಾ ಪಡೆಗಳ ಜವಾನರು ಪೊಲೀಸರು ಬಲಿಯಾಗಿರುವುದು ವರದಿಯಾಗುತ್ತಿವೆ. ನಕ್ಸಲ್ ದಾಳಿಗಳಿಗೆ ನಮ್ಮ ವೀರ ಸೈನಿಕರು, ಪೊಲೀಸರು ಬಲಿಯಾಗಿರುವ ಘಟನೆಗಳು ಇವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿರುವ, ದೇಶದ ಭದ್ರತೆಗೆ ಕಂಟಕರಾಗಿರುವ ನಕ್ಸಲ್ ಸಮಸ್ಯೆಯ ಮೂಲೋತ್ಪಾಟನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡುವುದು ಸದ್ಯದ ಅನಿವಾರ್ಯತೆಯಾಗಿದೆ.
ಬಿಜೆಪಿ ರಾಜ್ಯಗಳಲ್ಲಿಯೂ ನಕ್ಸಲ್ ಸಮಸ್ಯೆಯು ತಲೆದೋರುತ್ತಿದೆ. ಒಂದು ರಾಷ್ಟ್ರೀಯ ಸಮಸ್ಯೆ, ದೇಶದ ಭದ್ರತೆಗೆ ಸವಾಲಾಗಿರುವ ವಿಚಾರವನ್ನು ಕೇವಲ ಕರ್ನಾಟಕಕ್ಕೆ ಮಾತ್ರಾ ಸೀಮಿತಗೊಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ನಕ್ಸಲ್ ಸಮಸ್ಯೆ ಹುಟ್ಟಿಕೊಂಡಿದೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡುವ ಸುನೀಲ್ ಕುಮಾರ್ ಅವರದ್ದು ಬೌಧಿಕ ದಿವಾಳಿತನವಾಗಿದೆ. ತಮ್ಮ ಮೇಲೆ ದಾಳಿ ನಡೆದರೂ ಜೀವದ ಹಂಗು ತೊರೆದು ನಕ್ಸಲ್ ದಾಳಿಯನ್ನು ದೈರ್ಯವಾಗಿ ಹಿಮ್ಮೆಟ್ಟಿಸಿದ ನಮ್ಮ ಪೋಲೀಸರ ಸಾಹಸೀ ಕಾರ್ಯವನ್ನು ಒಬ್ಬ ಶಾಸಕನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸುನೀಲ್ ಕುಮಾರ್ ಅವರು ಶ್ಲಾಘಿಸುವುದನ್ನು ಬಿಟ್ಟು ಅದರಲ್ಲೂ ಕಾಂಗ್ರೆಸ್ ಬಿಜೆಪಿ ಎಂದು ರಾಜಕೀಯದ ಬಣ್ಣ ಬಳಿಯಲು ಯತ್ನಿಸಿರುವುದು ನಮ್ಮ ಪೊಲೀಸರಿಗೆ ಮಾಡಿದ ಅವಮಾನವಾಗಿದೆ ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ಇನ್ನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.